

ಚಿತ್ರದುರ್ಗ ಸೆ.06: ಆಗಸ್ಟ್ 7 ರಿಂದ 12 ರವರೆಗೆ ನಡೆದ 1ನೇ ಸುತ್ತಿನ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಸೆ.11 ರಿಂದ 16 ವರೆಗೆ 2ನೇ ಸುತ್ತಿನ ಲಸಿಕೆ ಅಭಿಯಾನ ಜರುಗಲಿದ್ದು, 768 ಗರ್ಭಿಣಿಯರು, ಎರಡು ವರ್ಷದ ಒಳಗಿನ 2843 ಮಕ್ಕಳು, 2 ರಿಂದ 5 ವರ್ಷ ಒಳಗಿನ 14 ಮಕ್ಕಳು ಸೇರಿ ಒಟ್ಟು 3625 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ಪಡೆದ ಪ್ರತಿ ಮಗುವಿನ ದಾಖಲೆ ಸಂಗ್ರಹಿಸಿ ಯು-ವಿನ್ ತಂತ್ರಾಂಶದಲ್ಲಿ ತಪ್ಪದೇ ಅಳವಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ 5 ಮಕ್ಕಳಿಗೆ ಒಂದು ಲಸಿಕಾ ಕಾರ್ಯಕ್ರಮ ನಡೆಸಬೇಕು. ಲಸಿಕಾ ಅಭಿಯಾನ ಯಶಸ್ವಿಯಾಗಲೂ ಪ್ರತಿ ತಾಲ್ಲೂಕು ಮಟ್ಟದಲ್ಲೂ ಕಾರ್ಯಪಡೆ ಸಭೆ ನಡೆಸಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ಇತರೆ ಇಲಾಖೆಗಳೊಡನೆ ಸಮನ್ವಯ ಸಾಧಿಸಿ ಲಸಿಕೆ ಅಭಿಯಾನದ ಯಶಸ್ವಿಗೆ ಶ್ರಮಿಸಬೇಕು. ತಾಲ್ಲೂಕುಗಳಲ್ಲಿ ಈಗಾಗಲೇ ಸಮೀಕ್ಷೆಯ ಮೂಲಕ ಲಸಿಕೆಯಿಂದ ವಂಚಿತರಾದ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ರೂಪಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳನ್ನು ಲಸಿಕಾಕರಣಕ್ಕೆ ಕರೆತರಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
520 ಸ್ಥಾನಿಕ ಹಾಗೂ 126 ಸಂಚಾರಿ ಸೇರಿ ಒಟ್ಟು 646 ಲಸಿಕಾಕರಣ ನಡೆಸಲು ಉದ್ದೇಶಿಸಲಾಗಿದೆ. ಕಳೆದ ಬಾರಿ ಲಸಿಕಾಕರಣದಿಂದ ಉಳಿದ ಮಕ್ಕಳು ಈ ಬಾರಿಯ ಬಿಟ್ಟು ಹೋಗಬಾರದು. ಪೋಷಕರು ಮಕ್ಕಳನ್ನು ಕರೆದುಕೊಂಡು ಕೆಲಸಕ್ಕೆ ತೆರಳಿರುವುದು, ಮಗು ಆರೋಗ್ಯದಿಂದ ಇಲ್ಲದಿರುವುದು, ಪೋಷಕರಿಗೆ ಲಸಿಕೆ ಮಾಡಿಸಲು ಆಸಕ್ತಿ ಇಲ್ಲದಿರುವುದು ನಿಗದಿತ ಗುರಿ ಸಾಧಿಸಲು ಅಡೆತಡೆಯಾಗಿವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮಗುವಿನ ಮನೆಯವರಿಗೂ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿ. ಗ್ರಾಮೀಣ ಭಾಗಗಳಿಂತ ನಗರ ಪ್ರದೇಶದಲ್ಲೇ ಮಕ್ಕಳು ಲಸಿಕೆ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ನಗರ ಪ್ರದೇಶದ ಮಕ್ಕಳಿಗೆ ಲಸಿಕೆ ನೀಡಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.
ಡಬ್ಲ್ಯೂಹೆಚ್ಓ ಸಮಾಲೋಚಕ ಶ್ರೀಧರ್ ಮಾತನಾಡಿ, ರಾಜ್ಯದಲ್ಲಿ 3240 ಮೀಸಲ್ಸ್ ಪ್ರಕರಣಗಳು ಕಂಡುಬಂದಿವೆ. ಹೆಚ್ಚಾಗಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವರದಿಯಾಗಿವೆ. ಬೆಂಗಳೂರು ಮಹಾನಗರದಲ್ಲೂ ಈ ಪ್ರಕರಣಗಳು ಕಂಡುಬಂದಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೀಸಲ್ಸ್ ಸಾಂಕ್ರಾಮಿಕದ ಯಾವುದೇ ಅಪಾಯಗಳು ಕಂಡುಬಂದಿಲ್ಲ. ಆದರೆ ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಯಲ್ಲಿ 148 ರೊಬೆಲ್ಲಾ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯಲ್ಲಿ 430 ಜ್ವರ ಹಾಗೂ ದದ್ದು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಲ್ಲಿ ನಿಗಾವಣೆ ಉತ್ತಮವಾಗಿದ್ದು, ಯಾವುದೇ ರೀತಿಯಲ್ಲಿ ರೋಗ ಉಲ್ಬಣಿಸಿ ಸಾಂಕ್ರಾಮಿಕ ಹಂತಕ್ಕೆ ತಲುಪಿಲ್ಲ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ 12 ಮಾರಕ ರೋಗಗಳ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ನಮ್ಮ ದೇಶ ಈಗಾಗಲೇ ಪೆÇಲೀಯೋ ಮುಕ್ತವಾಗಿದೆ. 2023ರ ಡಿಸೆಂಬರ್ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಮಾಡುವ ಗುರಿ ಇದೆ. ಇಂದ್ರಧನುಷ್ 5.0 ಪರಿಣಾಮಕಾರಿ ಅನುμÁ್ಠನಕ್ಕೆ ಅಗತ್ಯ ಕ್ರಮವಹಿಸಬೇಕು ಎಂದರು.
ಆರ್ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ಐದು ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭೀಣಿಯರಿಗೆ ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಆಯೋಜಿಸಿಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಲಸಿಕೆ ಅಭಿಯಾನಕ್ಕೆ ಕೈಜೋಡಿಸಬೇಕು. ಯೋಜಿತ ಲಸಿಕಾಕರಣಗಳ ಸಂಖ್ಯೆ ಹಾಗೂ ನಡೆದ ಲಸಿಕಾಕರಣಗಳ ಸಂಖ್ಯೆಯು ಹೊಂದಾಣಿಕೆಯಾಗಬೇಕು. ಸರಿಯಾದ ರೀತಿಯಲ್ಲಿ ಕಾರ್ಯಯೋಜನೆಯನ್ನು ಲಸಿಕಾ ಅಧಿಕಾರಿಗಳು ಪಾಲಿಸಬೇಕು. ತಾಲ್ಲೂಕುಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯಾವ ರೀತಿಯಲ್ಲಿ ದಡಾರ ಮತ್ತು ರುಬೆಲ್ಲಾ ರೋಗ ನಿರ್ಮೂಲನೆಗೆ ಕಾರ್ಯತತ್ಪರರಾಗಬೇಕು ಎಂಬುವುದರ ಕುರಿತು ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲಾಮಟ್ಟಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ದೇವರಾಜ, ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಣುಪ್ರಸಾದ್ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….