

ದಾವಣಗೆರೆ; ಸೆ. 8 : ಮಿಷನ್ ಇಂದ್ರಧನುಷ್ 0.5 ಅಭಿಯಾನದ ಎರಡನೇ ಹಂತ ಪ್ರಾರಂಭವಾಗುತ್ತಿದ್ದು, ಲಸಿಕೆಗಳನ್ನು ಹಾಕಿಸದೇ ಇರುವ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್.ಸಿ.ಹೆಚ್ ಅಧಿಕಾರಿ ಡಾ. ರೇಣುಕಾ ಆರಾಧ್ಯ ತಿಳಿಸಿದರು.
ಗುರುವಾರ ದಾವಣಗೆರೆಯ ಭರತ್ ಕಾಲೋನಿ, 9 ನೇ ಕ್ರಾಸ್ ಸೇವಾಲಾಲ್ ದೇವಸ್ಥಾನದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಉದ್ದೇಶ ಪೌಷ್ಠಿಕ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸಿವುದಾಗಿದೆ. ಇಲ್ಲಿ ಪಡೆದ ಮಾಹಿತಿ ತಿಳಿದುಕೊಂಡು ಆರೋಗ್ಯ ರಕ್ಷಣೆಗೆ ಅಗತ್ಯವಾದ ಆಹಾರ ಸೇವಿಸಬೇಕು. ಹಾಗೂ ಹೆಣ್ಣು ಮಕ್ಕಳಿಗೆ 21 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು, ಆಗ ಗರ್ಭಪಾತ ಸಂಖ್ಯೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ದೇವರಾಜ್ ಮಾತನಾಡಿ ಗರ್ಭಿಣಿಯರಿಗೆ ಹಿಮೊಗ್ಲೋಬಿನ್ 10 ಗ್ರಾಂ ಇರಬೇಕು, ಐರನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗಡೆದುಕೊಳ್ಳಬೇಕು ಮತ್ತು ಪ್ರತಿಯೊಬ್ಬ ಗರ್ಭಿಣಿ ತನ್ನ ಗರ್ಭಾವಸ್ಥೆಯಲ್ಲಿ 10 ಕೆ.ಜಿ. ತೂಕ ಹೆಚ್ಚಳವಾಗಬೇಕು ಆಗ ಆರೋಗ್ಯವಂತ ಮಗು ಜನಿಸುತ್ತದೆ ಎಂದು ತಿಳಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯದರ್ಶಿನಿ ಮಾತನಾಡಿ ಪೋಷಣ್ ಅಭಿಯಾನ ಯೋಜನೆಯು 2018 ರಲ್ಲಿ ಪ್ರಾರಂಭವಾಗಿದೆ. ಪ್ರತಿ ತಿಂಗಳು ಸೆಪ್ಟಂಬರ್ ಮಾಹೆಯ 1 ನೇ ತಾರೀಖಿನಿಂದ 30 ನೇ ತಾರೀಖಿನವರೆಗೆ ಪೋಷಣ್ ಮಾಸಾಚರಣೆ ಹೆಸರಿನಲ್ಲಿ ಪ್ರತಿ ವರ್ಷವು ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಈ ಯೋಜನೆಯಡಿ ಬರುವ ಪೋಷಣೆ ಟ್ರಾಕರ್ನಲ್ಲಿ ಮಕ್ಕಳನ್ನು ತೂಕ ಮಾಡಿ ಬರುವ ಸ್ಯಾಮ್ ಮಕ್ಕಳನ್ನು ಎನ್.ಆರ್.ಸಿ ಕೇಂದ್ರಕ್ಕೆ 14 ದಿನ ದಾಖಲಿಸಿ ಮಗುವನ್ನು ಅಪೌಷ್ಠಿಕತೆಯಿಂದ ಪೌಷ್ಠಿಕತೆಗೆ ತರುತ್ತೇವೆ. ಸ್ತನ್ಯಪಾನ ಸಪ್ತಾಹ, ಸಮುದಾಯ ಆಧಾರಿತ ಚಟುವಟಿಕೆಗಳನ್ನು ಮಾಡುವ ಮೂಲಕ ಜನರಿಗೆ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.
ಮಕ್ಕಳ ತಜ್ಞೆ ಡಾ. ಚೈತಾಲಿ ಎನ್.ಎಸ್ ಮಾತನಾಡಿ ಗರ್ಭಿಣಿ ತಾಯಿಯ ಪೌಷ್ಠಿಕ ಮಟ್ಟದ ಆಧಾರದ ಮೇಲೆ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಪೌಷ್ಠಿಕ ಮಟ್ಟ ನಿರ್ಧಾರವಾಗುತ್ತದೆ. ರಕ್ತ ಹೀನತೆಯು ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಲ್ಲಿ ಒಂದು ಜ್ವಲಂತ ಸಮಸ್ಯೆಯಾಗಿದೆ. ಪ್ರತಿ ದಿನ ಸಮತೋಲನ ಆಹಾರವನ್ನು ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಗರ್ಭಾವಸ್ಥೆಯಲ್ಲಿ ತಾಯಂದಿರನ್ನು ಸೀಮಂತ ಕಾರ್ಯದಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಅವರು ಸಂತೋಷವಾಗಿರುತ್ತಾರೆ, ತಾಯಿ ಹಾಲಿಗಿಂತ ಶ್ರೇಷ್ಠ ಆಹಾರವಿಲ್ಲ, ಮಗು ಹುಟ್ಟಿದ 6 ತಿಂಗಳವರೆಗೆ ನಂತರ ಮಗುವಿಗೆ ತಾಯಿಯ ಹಾಲು ಸಾಕಾಗುವುದಿಲ್ಲವಾದ್ದರಿಂದ ಮೇಲಿನ ಆಹಾರವನ್ನು ಹಂತಹಂತವಾಗಿ ಕೊಡಲು ಪ್ರಾರಂಭಿಸಬೇಕು. ಪೌಷ್ಠಿಕತೆ ವಿಚಾರವಾಗಿ ತಾವು ತಿಳಿದುಕೊಂಡಿರುವ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದರು.
ಬಿ.ಹೆಚ್.ಇ ಉಮಾಪತಿ ಹೆಚ್. ಆರೋಗ್ಯವಂತ ಮಗು ಹೇಗಿರಬೇಕು & ಗರ್ಭಿಣಿಯರು ಸೇವಿಸಬೇಕಾದ ಆಹಾರಗಳ ಕುರಿತು, ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ವೆಂಕಟಚಲಕುಮಾರ್ ಪಿ.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ಪೋಷಣ್ ಅಭಿಯಾನ ಮಹತ್ತವದ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ವಿಶೇಷ ಕಾರ್ಯಕ್ರಮಗಳು : ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ವಿವಿಧ ಆಹಾರ ಪದಾರ್ಥಗಳಿಂದ ತಯಾರಿಸಿದಂತಹ ಪೌಷ್ಠಿಕ ಆಹಾರ ಪದಾರ್ಥಗಳ ಪದರ್ಶನ, ಗರ್ಭಿಣಿಯರಿಗೆ ಸೀಮಂತ ಕಾರ್ಯ ಹಾಗೂ ಆರೋಗ್ಯವಂತ ಮಕ್ಕಳಿಗೆ ಬೇಬಿ ಶೋ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ.ಸುಧಾ ಮಕರಿ ಮತ್ತು ಕವಿತಾ ಅನ್ವೇರಿ ಗರ್ಭಿಣಿಯರು, ಬಾಣಂತಿಯರು, ಫಲಾನುಭವಿಗಳು, ಮೇಲ್ವಿಚಾರಕಿಯರು, ಪೋಷಣ್ ಕೋ ಆರ್ಡಿನೇಟರ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮುಂತಾದವರು ಭಾಗವಹಿಸಿದ್ದರು.