

ದಾವಣಗೆರೆ; ಸೆ.7 : ಜನರು ಬೀದಿ ಬದಿಯ ಆಹಾರ, ಜಂಕ್ ಫುಡ್ಗಳನ್ನು ತಿನ್ನುವುದರ ಬದಲಾಗಿ ನಿಸರ್ಗದಲ್ಲಿ ಕಾಲಕಾಲಕ್ಕೆ ದೊರೆಯುವ ಹಣ್ಣು, ತರಕಾರಿಗಳನ್ನು ತಪ್ಪದೇ ಸೇವಿಸಿ ಪೌಷ್ಠಿಕತೆಯ ಮಟ್ಟವನ್ನು ಸುಧಾರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ತಿಳಿಸಿದರು.
ಶನಿವಾರ(ಸೆ.2) ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪೌಷ್ಠಿಕ ಆಹಾರ ತಯಾರಿಕೆಯು ಎಲ್ಲಾ ತಾಯಂದಿರ ಜವಾಬ್ದಾರಿಯಾಗಿದ್ದು, ಇಡೀ ಕುಟುಂಬದ ಸ್ವಾಸ್ಥ್ಯ ಅವರು ತಯಾರಿಸುವ ಪೌಷ್ಠಿಕ ಆಹಾರದ ಮೇಲೆ ಅವಲಂಭಿತವಾಗಿರುತ್ತದೆ. ಬೀದಿ ಬದಿಯ ಆಹಾರ, ಜಂಕ್ ಫುಡ್ಗಳನ್ನು ತಿನ್ನುವುದರ ಬದಲಾಗಿ ನಿಸರ್ಗದಲ್ಲಿ ಕಾಲಕಾಲಕ್ಕೆ ದೊರೆಯುವ ಹಣ್ಣು, ತರಕಾರಿಗಳನ್ನು ತಪ್ಪದೇ ಎಲ್ಲರೂ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುವುದಲ್ಲದೆ, ರೋಗಗಳು ಕಾಣಿಸಿಕೊಂಡಾಗಲೂ ಬೇಗ ಗುಣಮುಖರಾಗಲು ಸಾಧ್ಯವಿದೆ. ಊಟದ ವಿಷಯದಲ್ಲಿ ಗಂಡು, ಹೆಣ್ಣು ಎಂದು ತಾರತಮ್ಯ ಮಾಡದೆ ಎಲ್ಲರೂ ಸರಿಯಾದ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ ಅಪೌಷ್ಠಿಕತೆಯಿಂದಾಗಿ ಹಲವಾರು ಅನಾರೋಗ್ಯದ ಪರಿಸ್ಥಿತಿಗಳು ಉದ್ಭವಿಸಿ, ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಗರ್ಭಿಣಿ ತಾಯಿಯು ಪೌಷ್ಠಿಕ ಮಟ್ಟದ ಆಧಾರದ ಮೇಲೆ ಆಕೆಗೆ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಪೌಷ್ಠಿಕ ಮಟ್ಟ ನಿರ್ಧಾರವಾಗುತ್ತದೆ.

ರಕ್ತ ಹೀನತೆಯು ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಲ್ಲಿ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಪ್ರತಿ ದಿನ ಸಮತೋಲನ ಆಹಾರವನ್ನು ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಎಲ್ಲರೂ ಪ್ರತಿ ದಿನ ಏಕದಳ, ದ್ವಿದಳ ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಹಾಗೂ ಹಣ್ಣು-ಹಂಪಲುಗಳನ್ನು ಸೇವಿಸುವುದರಿಂದ ಪೌಷ್ಠಿಕತೆಯ ಮಟ್ಟ ಹೆಚ್ಚುತ್ತದೆ ಎಂದರು.
ಮಕ್ಕಳ ತಜ್ಞ ಡಾ. ಸುಧಾ ಪಾಟೀಲ್ ಮಾತನಾಡಿ ಒಂದು ಹೆಣ್ಣು ಮಗು ಜನಿಸಿದ ಕ್ಷಣದಿಂದ ಆ ಮಗುವಿಗೆ ಪೌಷ್ಠಿಕ ಆಹಾರ ನೀಡುತ್ತಾ, ಆಕೆ ಮುಂದೆ ಬೆಳೆದು ದೊಡ್ಡವಳಾಗಿ ತಾಯಿಯಾಗುವ ವರೆಗೂ ಆಕೆಯ ಆರೋಗ್ಯದ ಬಗ್ಗೆ ಹಾಗೂ ಪೌಷ್ಠಿಕ ಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಮಗು ಜನಿಸಿದ ತಕ್ಷಣ ನೀಡುವ ತಾಯಿಯ ಹಾಲೇ ಮೊದಲ ರೋಗ ನಿರೋಧಕ ಚುಚ್ಚುಮದ್ದು. ಮಗು ಜನಿಸಿದ ತಕ್ಷಣ ಮಗುವಿಗೆ ತಾಯಿಯ ಹಾಲನ್ನು ಉಣಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನ: ವಿಶೇಷವಾಗಿ ವಿವಿಧ ಆಹಾರ ಪದಾರ್ಥಗಳಿಂದ ತಯಾರಿಸಿದ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪದರ್ಶಿಸಲಾಯಿತು.
ದಾವಣಗೆರೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಮಾ ಟಿ.ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶೋಭಾ ವಿ. ಪಟೇಲ್, ಹಾಗೂ ರತ್ನಮ್ಮ ರಂಗಣ್ಣನವರ್, ಗರ್ಭಿಣಿ, ಬಾಣಂತಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.