

ದಾವಣಗೆರೆ(ಆ 24),,ಮಣ್ಣಿನಿಂದ ಮಾಡಿದ, ಬಣ್ಣವಿಲ್ಲದ, ಆದಷ್ಟು ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಮಾಡಲು ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ ಅವರು ಕರೆ ನೀಡಿದರು.
ನಗರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದೆ, ಜೇಡಿ ಮಣ್ಣಿನಿಂದ ಮಾಡಿದ, ಅದರಲ್ಲೂ ಬಣ್ಣವಿಲ್ಲದ, ಆದಷ್ಟು ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ನಾವೆಲ್ಲರೂ ಆಚರಿಸೋಣ.ಗಣೇಶನನ್ನು ಇಷ್ಟಪಡಲು ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲರೂ ಇಷ್ಟ ಪಡುತ್ತಾರೆ. ಗಣೇಶ ಎಂದರೆ ವಿದ್ಯೆಗೆ ಸಂಬAಧಪಟ್ಟ ದೇವರು. ಆದರೂ ಈ ಹಬ್ಬದ ಆಚರಣೆ ಸಂದರ್ಭದಲ್ಲಿ ಎಲ್ಲರೂ ಸ್ವಲ್ಪ ಜಾಗೃತರಾಗಿರಬೇಕಿರುವುದು ಅನಿವಾರ್ಯ. ದೇವರ ಹಬ್ಬದ ಆಚರಣೆಯಲ್ಲಿ ನಾವು ತಪ್ಪುಗಳನ್ನು ಮಾಡುವುದು ಬೇಡ ಎಂದು ಹೇಳಿದರು.

ಭೂಮಿ ಮೇಲಿನ ಫಲವತ್ತಾದ, ಸಾರಾಂಶವುಳ್ಳ ಮಣ್ಣನ್ನು ನಾವು ದೊಡ್ಡ ದೊಡ್ಡ ಗಣೇಶ ಮೂರ್ತಿ ರೂಪದಲ್ಲಿ ಸಮುದ್ರಕ್ಕೆ, ಕೆರೆಗೆ ಹಾಕುತ್ತಿದ್ದೇವೆ. ಅದಕ್ಕಾಗಿ ಇದನ್ನು ತಪ್ಪಿಸಲು ಸಾಮೂಹಿಕವಾಗಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು ಪಾಲಿಕೆಯ ವ್ಯಾಪ್ತಿಯಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಗಣೇಶ ಮೂರ್ತಿ ಸುಂದರತೆಗೆ ಬಳಸುವ ಬಣ್ಣಗಳಿಗೆ ಲೋಹಗಳನ್ನು ಉಪಯೋಗಿಸಲಾಗುತ್ತದೆ. ಬೇರೆ ಬೇರೆ ಬಣ್ಣಗಳು ಬರುವುದಕ್ಕೆ ಉಪಯೋಗಿಸುವ ಲೋಹಗಳಲ್ಲಿ ಅಪಾಯಕಾರಿ ಲೋಹಗಳು ಇರುತ್ತವೆ. ಅದರಲ್ಲಿ ಕ್ರೋಮಿಯಂ ಕೂಡ ಒಂದು. ಇದು ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಗಣೇಶ ಮೂರ್ತಿಗಳಿಗೆ ಅಲಂಕಾರ ಮಾಡಿದ ಪ್ಲಾಸ್ಟಿಕ್ ಹೂ ಮತ್ತು ಅಲಂಕಾರ ವಸ್ತುಗಳನ್ನು, ಹಾಗೂ ಕೊಳೆತು ಹೋಗುವ ತಿಂಡಿ ಪದಾರ್ಥಗಳನ್ನು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೆರೆಗೆ ಅಥವ ಬಾವಿಗೆ ಎಸೆಯದೆ ಬೇರ್ಪಡಿಸಿ ಗಣೇಶ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡಬೇಕು. ಇಲ್ಲದಿದ್ದರೆ ಇದರಿಂದ ಜಲ ಜೀವಿಗಳಿಗೂ, ಪಕ್ಷಗಳ ಜೀವಕ್ಕೆ ಅಪಾಯ ಎಂದರು.

ಜಿಲ್ಲಾ ಇಲಾಖೆಯಿಂದಲೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಾಗೃತಿ ಮೂಡಿಸಲಾಗುತ್ತಿದ್ದು, ತಯಾರಿಕೆ ಮಾಡುವವರಲ್ಲಿ ಬಣ್ಣವನ್ನು ಬಳ್ಳಸದೆ ಗಣೇಶ ಮೂರ್ತಿಯನ್ನು ತಯಾರಿಸಿ ಎಂದು ಜಾಗೃತಿ ಮೂಡಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಯನ್ನು ತಯಾರಿಸಿದರೆ ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಗಣೇಶ ಹಬ್ಬ ಆಚರಿಸೋಣ ಆದರೆ ಪರಿಸರ ಸ್ನೇಹಿಯಾಗಿರಲಿ ಎಂದು ಮನವಿ ಮಾಡಿದ್ದಾರೆ.