ಭಾರತ ರತ್ನ ಡಾ; ಸರ್ವಪಲ್ಲಿ ರಾಧಕೃಷ್ಣನ್ 135 ನೇ ಜನ್ಮ ದಿನಾಚರಣೆ.



ದಾವಣಗೆರೆ: ಸೆ.5 (ಕರ್ನಾಟಕ ವಾರ್ತೆ) : ಶಾಂತಿ ಮತ್ತು ಸಂತೃಪ್ತಿಯ ಜೀವನ ನಡೆಸಲು ಮತ್ತು ಬದುಕನ್ನು ಕಟ್ಟಿಕೊಳ್ಳಲು ಇದಕ್ಕೆ ಮೂಲ ತಳಹದಿ ಶಿಕ್ಷಣವಾಗಿದೆ. ಈ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯುವುದು ಅತೀ ಮುಖ್ಯವಾದದು ಎಂದು ಗಣಿ ಮತ್ತು ಭೂ ವಿಜ್ಞಾನ, ತೊಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ; ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಹಾಗೂ ದಾವಣಗೆರೆ ಉತ್ತರ, ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಡಾ; ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತೋಷ ಮತ್ತು ಸಂತೃಪ್ತಿಯ ಜೀವನ ಸಾಧ್ಯವಾಗಲು ಇದಕ್ಕೆ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿರಬೇಕೆಂದು ಹೇಳಿದವರು ಡಾ; ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಣ ಕೊಟ್ಟಂತಹ ಗುರುವೃಂದಕ್ಕೆ ನಮಿಸುವ ದಿನ ಇದಾಗಿದೆ. ಆದರ್ಶ ಶಿಕ್ಷಕರಾದ ಇವರು ತಮ್ಮ ಸಾಧನೆಯ ಮೂಲಕ ಹಲವು ಹುದ್ದೆಗಳನ್ನೇರಿದರು. ಇವರ ಕೊಡುಗೆ ಎಲ್ಲರಿಗೂ ಮಾದರಿಯಾಗಿದ್ದು ಅವರ ತತ್ವ, ಸಿದ್ದಾಂತಗಳನ್ನು ವಿದ್ಯಾರ್ಥಿ ಜೀವನ, ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ತಂದುಕೊಡಬೇಕಾಗಿದೆ. ಅವರ ಜನ್ಮ ದಿನಾಚರಣೆಯನ್ನು 1962 ರ ಸೆಪ್ಟೆಂಬರ್ 5 ರಿಂದ ಆಚರಿಸುತ್ತಾ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಸಮಾಜ, ದೇಶ ಕಟ್ಟುವಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿರುತ್ತದೆ. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಉದಾಸೀನ ಮಾಡಿದರೆ ಇಡೀ ಸಮಾಜ ಮತ್ತು ದೇಶ ಹಾಳಾಗುತ್ತದೆ. ಇದನ್ನು ಅರಿತರೆ ಶಿಕ್ಷಕರ ಕರ್ತವ್ಯ ಎಷ್ಟು ಮೌಲ್ಯಯುತವಾಗಿರುತ್ತದೆ ಎಂಬುದು ತಿಳಿಯುತ್ತದೆ. ಆದ್ದರಿಂದ ಶಿಕ್ಷಕರು ಸದಾ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿನ ಶಿಕ್ಷಕರು ಸಾಕಷ್ಟು ಅತ್ಯುತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. 2001 ರಲ್ಲಿ ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ 3 ನೇ ಸ್ಥಾನಕ್ಕೇರಿತ್ತು, ನಂತರದಲ್ಲಿ ಇದು ಕುಸಿತವಾಯಿತು. ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸಿದ ಶಿಕ್ಷಕರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಶಿಕ್ಷಕರು ತಮ್ಮ ಮನಸು ಇಚ್ಚೆಯಂತೆ ಪಾಠ ಮಾಡಲು ಮುಂದೆ ಬರಬೇಕು, ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಾವು ಬದ್ದವಾಗಿದ್ದೇವೆ. ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತಾಗಿ ಇತರೆ ಒತ್ತಡಗಳು ಕಡಿಮೆ, ಶಿಕ್ಷಕರು ಶೈಕ್ಷಣಿಕ ಯೋಜನೆಗಳ ಬಗ್ಗೆ ಚಿಂತನೆ ನಡೆಸುವರು. ಜಿಲ್ಲೆಯ ಎಲ್ಲಾ ಶಿಕ್ಷಕರು ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ಜಿಲ್ಲೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಶ್ರಮಿಸಬೇಕು ಎಂದರು.


ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಸಭೆ; ವೃಂದ ಮತ್ತು ನೇಮಕಾತಿ ನಿಯಮಾವಳಿಗಳು ತಿದ್ದುಪಡಿಯಾಗಿರುವುದರಿಂದ ಪ್ರಾಥಮಿಕ ಶಾಲೆ ಶಿಕ್ಷಕರು, ಪದವೀಧರ ಶಿಕ್ಷಕರು ಮತ್ತು ಪ್ರೌಢಶಿಕ್ಷಣ ಶಿಕ್ಷಕರೆಂದು ಬೇರ್ಪಡಿಸಿದ್ದು ಬಡ್ತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಶಿಕ್ಷಕರು ತಮ್ಮ ಅಹವಾಲುಗಳನ್ನು ಸಚಿವರಿಗೆ ನೀಡಿದರು. ಇದಕ್ಕೆ ಸಚಿವರು ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ಸಭೆಯನ್ನು ಆಯೋಜನೆ ಮಾಡಿಸುವ ಮೂಲಕ ಶಿಕ್ಷಕರ ಕುಂದುಕೊರತೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಯಾವುದೇ ವ್ಯಕ್ತಿ ಉನ್ನತ ಸ್ಥಾನ ತಲುಪಲು ಶಿಕ್ಷಕರು ಕಾರಣ, ಶಿಕ್ಷಕರಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯ. ಹಿಂದಿನ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಸಮುದಾಯಗಳ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಪ್ರಯತ್ನವನ್ನು ಸಾವಿತ್ರಿಬಾಯಿ ಪುಲೆ ಅವರು ಮಾಡಿದರು, ಇಂದು ಅವರನ್ನು ಸಹ ಸ್ಮರಿಸಿಕೊಳ್ಳಬೇಕು ಎಂದರು.


ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು. ಉನ್ನತ ಶಿಕ್ಷಣವಿದ್ದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಕೊರತೆ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇದನ್ನು ಹೋಗಲಾಡಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಶಿಕ್ಷಕರು ತಮ್ಮ ಕೆಲಸವನ್ನು ಜವಾಬ್ದಾರಿಯತವಾಗಿ ನಿರ್ವಹಿಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಅಭಿವೃದ್ದಿಗೆ ಕ್ರಮ ವಹಿಸಬೇಕೆಂದು ತಿಳಿಸಿದರು.
ದಾವಣಗೆರೆ ಸಮೀಪದ ಆನಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 450 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಖಾಸಗಿ ಶಾಲೆಗಿಂತ ಹೆಚ್ಚು ಬೇಡಿಕೆ ಈ ಶಾಲೆಗಿದೆ. ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸರ್ಕಾರಕ್ಕೆ ಅವಲಂಭಿತವಾಗದೆ ಶಾಲಾಭಿವೃದ್ದಿಗೆ ಅಗತ್ಯವಿದ್ದಾಗ ಗ್ರಾಮದ ಹಿರಿಯರಿಂದ ದೇಣಿಗೆ ಪಡೆದು ಶಾಲೆಯ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಇದು ಇತರ ಶಾಲೆಗಳಿಗೆ ಮಾದರಿಯಾಗಿದೆ, ಗ್ರಾಮೀಣ ಭಾಗದ ಶಾಲೆಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕಾಗಿದೆ ಎಂದರು.


ಪ್ರಶಸ್ತಿಗಳು ಶಿಕ್ಷಕರನ್ನು ಹುಡುಕಿಕೊಂಡು ಬರಬೇಕೆ ಹೊರತು, ಶಿಕ್ಷಕರು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಬಾರದು. ತಮ್ಮ ಕಾಯಕದ ಮೂಲಕ ಪ್ರಶಸ್ತಿಯನ್ನು ಪಡೆದರೆ ಅದು ಸಾರ್ಥಕ, ಯಾವುದೇ ರೀತಿಯ ಶಿಫಾರಸು ಅಥವಾ ಹಣದಿಂದ ಪ್ರಶಸ್ತಿಗಳನ್ನು ಖರೀದಿ ಮಾಡಿಕೊಳ್ಳಬಾರದು, ಅದಕ್ಕೆ ಅರ್ಥ ಇರುವುದಿಲ್ಲ. ಸೇವಾನಿರತ ಶಿಕ್ಷಕರ ಕುಂದು ಕೊರತೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದ ಅವರು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲಾ ರೀತಿಯಾಗಿ ಸಹಕರಿಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಮಾತನಾಡಿ ಒಂದು ಅಮೂರ್ತ ಸ್ವರೂಪಕ್ಕೆ ಮೂರ್ತರೂಪವನ್ನು ನೀಡಿ, ಭಾವನೆಗಳನ್ನು ತುಂಬಿ ಉತ್ತಮ ವ್ಯಕ್ತಿಯ ರೂಪ ನೀಡುತ್ತಾರೆ. ಸಮಾಜದಲ್ಲಿ ಶಿಕ್ಷಕರನ್ನು ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಎಂದು ದೇವರ ಸ್ಥಾನದಲ್ಲಿ ಇಟ್ಟಿದ್ದೇವೆ. ಅಂತಹ ಶಿಕ್ಷಕರ ಪಾತ್ರ ಅಪಾರವಾದುದು, ಇಂದು ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಿಗೆ ಅಂತರ್ಜಾಲದ ಮೂಲಕವೇ ಸಾಕಷ್ಟು ಜ್ಞಾನ ದೊರೆಯುತ್ತಿದೆ. ಆದರೆ ಅಂತರ್ಜಾಲವು ಕೇವಲ ಜ್ಞಾನ ಒದಗಿಸುತ್ತದಯೇ ವಿನಃ ಜ್ಞಾನ ದರ್ಶನ ಮಾಡಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬೆಳೆಸಲು ಸಾಧ್ಯವಾಗದು, ಇದು ಶಿಕ್ಷಕರು ಮಾಡುವ ಪಾಠ, ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯವಾಗಲಿದೆ ಎಂದರು.
ಶೈಕ್ಷಣಿಕ ಸಲಹೆಗಾರರು ಮತ್ತು ತರಬೇತುದಾರರಾದ ಜಗನ್ನಾಥ್ ನಾಡಿಗೇರ ಶಿಕ್ಷಕರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರ ಮೊದಲಿನ ಹಾಗಿಲ್ಲ, ಹಿಂದಿನ ಕಾಲದಲ್ಲಿ ಶಿಕ್ಷಕರು ಶಿಕ್ಷೆಯನ್ನು ನೀಡಿ ವಿದ್ಯಾಭ್ಯಾಸ ಕಲಿಸುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಶಿಕ್ಷಕರು ಜೋರಾಗಿ ಮಾತನಾಡುವುದು ಕಷ್ಟವಾಗಿದೆ. ಬದಲಾಗುತ್ತಿರುವ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಶಿಕ್ಷಕರು ತಮ್ಮ ಬೋಧನಾ ವಿಧಾನವನ್ನು ಬದಲಿಸಿಕೊಳ್ಳಬೇಕಾಗಿದೆ.


ಇಂದಿನ ಮಕ್ಕಳಿಗೆ ಬೆನ್ನಿಗೆ ತಟ್ಟುವ ಶಿಕ್ಷಕರಿಗಿಂತ ಬೆನ್ನು ತಟ್ಟುವ ಶಿಕ್ಷಕರು ಹಾಗೂ ಕಿವಿ ಹಿಂಡುವ ಶಿಕ್ಷಕರಿಗಿಂತ ಕಿವಿ ಅರಳಿಸುವ ಶಿಕ್ಷಕರ ಕೊರತೆ ಇದೆ. ಮಕ್ಕಳ ಜೀವನದಲ್ಲಿ ಅಥವಾ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾದದು, ಒಬ್ಬ ಶಿಕ್ಷಕರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ನನ್ನ ಪಾತ್ರ ಹಾಗೂ ಜವಾಬ್ದಾರಿ ಏನಾಗಿರಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು.
ಶಿಕ್ಷಕರಾಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ, ಏಕೆಂದರೆ ಕ್ಲರ್ಕ್ ಆಗಿ ಕೆಲಸ ಮಾಡುವುದು ಸುಲಭ, ಅವರು ಕಡತಗಳ ಜೊತೆ ಕೆಲಸ ಮಾಡುತ್ತಾರೆ. ಆದರೆ ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಜೊತೆಗೆ ಕಾರ್ಯನಿರ್ವಹಿಸಬೇಕಾಗಿರುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ತಂದೆ-ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗುತ್ತದೆ. ಅಂತಹ ವೃತ್ತಿಯನ್ನು ನಿರ್ವಹಿಸಲು ಶಿಕ್ಷಕರಿಗೆ ಸರ್ಕಾರ ಇಂದು ಎಲ್ಲಾ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದು, ಅದರ ಸದ್ಬಳಕೆಯನ್ನು ಮಾಡಿಕೊಂಡು ಕಾರ್ಯನಿರ್ವಹಿಸೋಣ ಎಂದರು.


ಜಿಲ್ಲೆಯಲ್ಲಿ ಇಂದು 516 ಪ್ರೌಢಾಶಾಲೆಗಳಿದ್ದು, 2.60 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.94.12 ಬಂದಿದ್ದು ದಾವಣಗೆರೆ ಜಿಲ್ಲೆ 14ನೇ ಸ್ಥಾನದಲ್ಲಿದೆ ಎಂದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗ: ಚನ್ನಗಿರಿ ತಾಲ್ಲೂಕಿನ ಸತೀಶ್, ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಮ್ಲಾಪುರ, ರತ್ನಮ್ಮ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟ್ಟಕಡೂರು, ಹರಿಹರ ತಾಲ್ಲೂಕಿನ ಅರುಣ್ ಬಿ, ಸಹ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಕಿರಿಯ ಪ್ರಾಥಮಿಕ ಶಾಲೆ ಹಿಂಡಸಘಟ್ಟ, ಕೆ.ವಿ ಸುಜಾತ ಮುಖ್ಯ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಳ್ಳಾಪುರ, ದಾವಣಗೆರೆ ಉತ್ತರ ವಲಯದ ತಿಪ್ಪೇಶ್ ಟಿ.ಬಿ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ.ಚಿತ್ತಾನಹಳ್ಳಿ, ಗಂಗಮ್ಮ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲೇಬೇತೂರು, ದಾವಣಗೆರೆ ದಕ್ಷಿಣ ವಲಯದ ಬಸವರಾಜ ಈ. ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕತೊಗಲೇರಿ, ನಾಗವೇಣಿ ಎ.ಎಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀರಾಮಬಡಾವಣೆ, ಜಗಳೂರು ತಾಲ್ಲೂಕಿನ ಪ್ರೇಮ ಡಿ ಸಹ ಶಿಕ್ಷಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮ್ಮನಹಟ್ಟಿ, ಶ್ರೀದೇವಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭರಮಸಮುದ್ರ, ಹೊನ್ನಾಳಿ ತಾಲ್ಲೂಕಿನ ಮಹಮ್ಮದ್ ರಫೀ ಬಿ. ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮೇನಹಳ್ಳಿ, ಸುಧಾ ಹೆಚ್.ಹೆಚ್ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊರಟೂರು.


ಪ್ರೌಢಶಾಲಾ ವಿಭಾಗ; ಚನ್ನಗಿರಿ ತಾಲ್ಲೂಕಿನ ಹೆಚ್.ಪಿ ಶಿವಲಿಂಗಪ್ಪ, ದೈಹಿಕ ಶಿಕ್ಷಕರು, ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನಲ್ಲೂರು, ಹರಿಹರ ತಾಲ್ಲೂಕಿನ ಮಂಜುನಾಥ ಟಿ.ಡಿ, ಸಹ ಶಿಕ್ಷಕರು, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರೌಢಶಾಲೆ ಶಾಲೆ, ಹರಳಹಳ್ಳಿ, ದಾವಣಗೆರೆ ಉತ್ತರವಲಯದ ನಾಗರಾಜ ಟಿ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಆವರಗೆರೆ, ದಾವಣಗೆರೆ ದಕ್ಷಿಣವಲಯದ ಶ್ರೀಕಾಂತ ಕೆ ಸರ್ಕಾರಿ ಪ್ರೌಢಶಾಲೆ, ಹೆಚ್ ಬಸವಾಪುರ, ಜಗಳೂರು ತಾಲ್ಲೂಕಿನ ಸಿದ್ದಪ್ಪ ಹೆಚ್.ಎಸ್, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೇವಿಕೆರೆ, ಹೊನ್ನಾಳಿ ತಾಲ್ಲೂಕಿನ ಮಹೇಂದ್ರನಾಥ್ ಕೆ.ಜಿ, ಸಹ ಶಿಕ್ಷಕರು ಮಾರಿಕಾಂಭ ಪ್ರೌಢಶಾಲೆ, ಉಜ್ಜನೀಪುರ.
ವಿಶೇಷ ಪ್ರಶಸ್ತಿ ಪಡೆದ ಶಿಕ್ಷಕರ ವಿವರ: ದಾವಣಗೆರೆ ಉತ್ತರ ವಲಯದ ಆರ್ ಅನ್ನಪೂರ್ಣ, ಸರ್ಕಾರಿ ಹಿರಿಯ ಪ್ರೌಢಶಾಲೆ ಎಲೇಬೇತೂರು, ಹಾಲಪ್ಪ ಡಿ, ಸಹ ಶಿಕ್ಷಕ ಸಿ.ವಿ.ವಿ ಕನ್ನಡ ಹಿರಿಯ ಪ್ರೌಢಶಾಲೆ ಶಾಲೆ, ಕೆ.ಪಿ ರಸ್ತೆ, ದಾವಣಗೆರೆ, ಹೊನ್ನಾಳಿ ತಾಲ್ಲೂಕಿನ ಕುಮಾರನಾಯ್ಕ್ ಎಸ್, ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಮ್ಮಾರಗಟ್ಟೆ, ನ್ಯಾಮತಿ ತಾಲ್ಲೂಕಿನ ವಿಜಯಲಕ್ಷ್ಮಿ ಬಿ, ಸಹ ಶಿಕ್ಷಕಿ ಸರ್ಕಾರಿ ಕಿರಿಯ ಪ್ರೌಢಶಾಲೆ ಸುರಹೊನ್ನೆ, ರವಿಕುಮಾರ ಹೆಚ್, ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ ಗೋಪಗೊಂಡನಹಳ್ಳಿ, ಬಸವರಾಜ ಕೆ.ವಿ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಜೀನಹಳ್ಳಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಮಹಾನಗರಪಾಲಿಕೆ ಉಪಮಹಾಪೌರರು ಯಶೋಧ ಹೆಗ್ಗಪ್ಪ, ಮಹಾನಗರಪಾಲಿಕೆ ಸದಸ್ಯೆ ಗೀತಾ ದಿಳ್ಯಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಎಸ್.ಗೀತಾ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪುಪ್ಪಾಲತಾ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪಸೀಹ್ ಉದ್ದೀನ್ ಶಾಕೀರ್.ಕೆ.ಎ ಉಪಸ್ಥಿತರಿದ್ದರು

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!