
ದಾವಣಗೆರೆ: ಮೆಕ್ಕೆಜೋಳ ಬೆಳೆಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತ್ರತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎಪಿಎಂಸಿಯ ತಹಶೀಲ್ದಾರ್ ಕಚೇರಿ ಬಳಿಯಿರುವ ರಾಜ್ಯ ರೈತ ಸಂಘದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿಗೆ ತೆರಳಿ ಮನವಿ ಸಲ್ಲಿಸಿದರು

ಈ ವೇಳೆ ಮಾತನಾಡಿದ ಜಿಲ್ಲಾ ಗೌರವಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ದಾವಣಗೆರೆ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ಬಹುತೇಕ ಮಳೆ ಬಾರದೆ ಒಣಗುತ್ತಿವೆ. ರೈತರು ಕೃಷಿ ಮಾಡಲು ದುಬಾರಿ ಬಿತ್ತನೆ ಬೀಜ ರಸಗೊಬ್ಬರ, ಕೂಲಿ ಇತರೆ ವೆಚ್ಚಗಳಿಗೆ ಹಣ ಖರ್ಚು ಮಾಡಿ ಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ಮಳೆಬಾರದೆ ಬೆಳದ ಬೆಳೆಗಳೆಲ್ಲಾ ಒಣಗುತ್ತಿವೆ. ಇದಲ್ಲದೇ ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು. ಕಾರಣ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಕಳೆದ ವರ್ಷ ಅತಿವೃಷ್ಠಿ ಆಗಿತ್ತು. ಈ ವರ್ಷ ಮಳೆ ಇಲ್ಲದೆ ಅನಾವೃಷ್ಠಿ ಎದುರಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಕಾರಣ ರೈತರು ಬ್ಯಾಂಕುಗಳಲ್ಲಿ ಪಡೆದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಆದರೆ ಬ್ಯಾಂಕುಗಳು ರೈತರು ಸಾಲ ಪಾವತಿಸಬೇಕೆಂದು ಮೇಲಿಂದ ಮೇಲೆ ನೋಟೀಸ್ ಕಳಿಸುತ್ತಿವೆ ಆದ್ದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಸಂಬಂಧಿಸಿದಂತೆ ಅಧಿಕಾರಿಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು. ಇದಲ್ಲದೇ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಬೇಡಿಕೆಗಳನ್ನು ಈಡೇರಿಸಬೇಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್.ಟಿ.ಪರಮೇಶ್ವರಪ್ಪ, ಇ.ಶ್ರೀನಿವಾಸ್, ಕರಿಲಕ್ಕೇನಹಳ್ಳಿ ರೇವಣ ಸಿದ್ದಪ್ಪ, ಬಲ್ಲೂರು ನಾಗರಾಜ್ ರೆಡ್ಡಿ, ಈಚಘಟ್ಟದ ವಿಜಯಕುಮಾರ್, ಚಟ್ಟೋಬನಹಳ್ಳಿ ಕಮಲೇಶ್, ಕುಮಾರ್, ಕಿತ್ತೂರು ರುದ್ರೇಶ್, ಮಾಳಿಗೇರ ತಿಪ್ಪಣ್ಣ, ಬುಳ್ಳಾಪುರದ ಶರಣಪ್ಪ ಇತರರು ಇದ್ದರು.









