

ದಾವಣಗೆರೆ: ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಜಿಲ್ಲಾ ಕಾರ್ಮಿಕರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನೆಡೆಸಿದ ಪ್ರತಿಭಟನಾಕಾರರು, ರಾಜ್ಯದ ಕಾರ್ಮಿಕ ಮಂತ್ರಿಗಳಿಗೆ ಸಹಾಯಕ ಕಾರ್ಮಿಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾಧ್ಯಕ್ಷ ಕೆ.ಹೆಚ್.ಆನಂದರಾಜು, ಕಟ್ಟಡ ಕಾರ್ಮಿಕರ ಮಕ್ಕಳ ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ತಕ್ಷಣ ಹಣ ವರ್ಗಾವಣೆ ಆಗಬೇಕು. ಫಲಾನುಭವಿಯ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯಗೊಳಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಜತೆಗೆ ಬೋಗಸ್ ಕಾರ್ಡ್ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಸಂಜೀವಿನಿ ಜಾರಿಗೊಳಿಸಿ ಹಣರಹಿತ ಚಿಕಿತ್ಸೆ ಸೌಲಭ್ಯ ಒದಗಿಸಬೇಕು. ಕಟ್ಟಡ ಕಾರ್ಮಿಕರ ನೋಂದಣಿಗೆ ಹೊಸ ತಂತ್ರಾಂಶ ಆರಂಭಿಸಿ ಸರ್ವರ್ ಸಮಸ್ಯೆ ಹಾಗು ಇತರೆ ಇಲಾಖೆಯ ಮೇಲಿನ ಅವಲಂಬನೆ ತಪ್ಪಿಸಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಇರುವ ಸಮಸ್ಯೆಗಳನ್ನ ಬಗೆಹರಿಸಬೇಕು. ಅರ್ಜಿಗಳ ವಿಲೇವಾರಿ ವಿಳಂಬ ತಪ್ಪಿಸಲು ಪ್ರತಿ ಅರ್ಜಿಗೂ ಸಂಖ್ಯೆಯನ್ನು ನೀಡಿ ಸೀನಿಯಾರಿಟಿ ಆಧಾರದಲ್ಲಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಮಂಡಳಿಯಿಂದ ಆರಂಭಿಸಲಾದ ಶಿಶು ವಿಹಾರ, ಮೊಬೈಲ್ ಕ್ಲಿನಿಕ್ ಗಳು, ಬಸ್ ಪಾಸ್ ಬೇಡ. ಇವುಗಳ ಬದಲು ಮನೆ ನಿರ್ಮಾಣಕ್ಕೆ 5 ಲಕ್ಷ ರೂ, ಸಹಾಯಧನ ನೀಡಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು. ಸ್ಲಂ ಬೋರ್ಡ್ಗೆ ನೀಡಿದ ಹಣವನ್ನು ಮಂಡಳಿಗೆ ಮರು ಪಾವತಿ ಮಾಡಬೇಕು ಎಂದು ಹೇಳಿದರು.
ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕ ಸಂಘಟನೆಗಳಿಗೆ ಪ್ರಾತಿನಿದ್ಯ ಸಿಗಬೇಕು. ಕಲ್ಯಾಣ ಮಂಡಳಿಯಲ್ಲಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು. ಮಾತ್ರವಲ್ಲದೇ ಎಲ್ಲ ಖರೀದಿಗಳನ್ನು ನಿಲ್ಲಿಸಬೇಕು. ಅದರ ಬದಲಿಗೆ ಕಾರ್ಮಿಕರಿಗೆ ನೇರ ಹಣ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕಟ್ಟಡ ಕಾರ್ಮಿಕ ಮುಖಂಡರಾದ ಕುಮಾರ್, ಶ್ರೀನಿವಾಸ ಮೂರ್ತಿ, ನೇತ್ರಾವತಿ, ಶಿವಣ್ಣ, ರೂಪ, ಮಂಜುನಾಥ್, ಚಿದಾನಂದ, ರಾಜಪ್ಪ ಇತರರು ಇದ್ದರು.