

ಬಸವಾದಿ ಶಿವಶರಣರ ತತ್ವ, ಸಂದೇಶ ಅಳವಡಿಸಿಕೊಂಡು ನಡೆದರೆ ನಮ್ಮ ಬದುಕು ಸಾರ್ಥಕತೆ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿ ಅಭಿಮತ ವ್ಯಕ್ತಪಡಿಸಿದರು.

ಅವರು ಪಟ್ಟಣದ ಗಚ್ಚಿನಮಠದಲ್ಲಿ ಇಂದು ಆಯೋಜಿಸಿದ್ದ ಕಾಯಕಯೋಗಿ ಶಿವಶರಣ ಶ್ರೀ ನೂಲಿ ಚಂದಯ್ಯ ನವರ 916ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂತರು, ಶರಣರು, ಸ್ವಾಮೀಜಿಗಳಿಂದ ನಮ್ಮ ದೇಶವು ಅಧ್ಯಾತ್ಮಿಕ ಶ್ರೀಮಂತಿಕೆ ಹೊಂದಿದ ಪುಣ್ಯ, ಪಾವನ ಭೂಮಿಯಾಗಿದೆ. ನೂಲಿಯ ಚಂದಯ್ಯನವರಂತಹ ಶರಣರ, ಸಂತರ ಪ್ರವಚನ, ವಚನ ಸಂದೇಶಗಳನ್ನು ಆಲಿಸುವುದರಿಂದ, ಪಾಲಿಸುವುದರಿಂದ ನೆಮ್ಮದಿಯುತ ಬದುಕು ಕಾಣಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಅಧ್ಯಾತ್ಮಿಕತೆಯ ಅಗತ್ಯವಿದೆ ಎಂದು ಹೇಳಿದರು.
ಭಜಂತ್ರಿ ಸಮುದಾಯದ ಬೇಡಿಕೆಯಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಿಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಮುರುಘರಾಜೇಂದ್ರ ಸ್ವಾಮೀಜಿಯವರು, ಸಿದ್ದ ಕಬೀರ ಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸಿದ್ಧಾರ್ಥ ಸಿಂಗೆ, ಶಿವು ಗುಡ್ಡಾಪುರ, ಮಹಾಂತೇಶ ಠಕ್ಕಣ್ಣವರ, ಸಂಜೀವ ಕಾಂಬಳೆ, ಹನಮಂತ ಭಜಂತ್ರಿ, ಅಣ್ಣಪ್ಪ ಭಜಂತ್ರಿ, ಸಿದರಾಯ ಭಜಂತ್ರಿ,
ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಯಂತ್ಯುತ್ಸವದಲ್ಲಿ ಹಲವು ಗಣ್ಯಮಾನ್ಯರು, ಗುರುಹಿರಿಯರು, ಭಜಂತ್ರಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು