

ದಾವಣಗೆರೆ ಆ (19): ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ದತಿ ಬದಲು ನೇರಪಾವತಿ ಜಾರಿಗೊಳಿಸಲು ಪೌರಾಡಳಿತ ಸಚಿವ ರಹೀಂಖಾನ್ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಾಸಸೌಧದ ಸಭಾಂಗಣಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಪ್ರತಿನಿಧಿಗಳು ಹಾಗೂ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರು ವಿಭಾಗದಲ್ಲಿ ತೊಡಗಿಕೊಂಡಿರುವ ಹೊರಗುತ್ತಿಗೆ ನೌಕರರು ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಅನಗತ್ಯವಾಗಿ ಏಜೆನ್ಸಿಗಳ ಶೋಷಣೆಗೆ ಸಿಲುಕಿಸುವ ಗುತ್ತಿಗೆ ಪದ್ದತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ತರಲು ಅಗತ್ಯ ಪ್ರಸ್ತಾವನೆ ಸಿದ್ದಪಡಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಅವರಿಗೆ ಸೂಚನೆ ನೀಡಿದರು.
ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಅಗತ್ಯ ಮಾಹಿತಿ ಕ್ರೋಡೀಕರಿಸಿ ಪ್ರಸ್ತಾವನೆ ಸಿದ್ದಪಡಿಸುವುದಾಗಿ ಅವರು ಸಭೆಗೆ ತಿಳಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಘಟನೆಯ ಪ್ರತಿನಿಧಿಗಳು ಈಗಾಗಲೆ ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಹೊರಗುತ್ತಿಗೆ ನೌಕರರ ಮಾಹಿತಿ ನಗರಾಭಿವೃದ್ದಿ ಇಲಾಖೆ ಬಳಿ ಇದೆ.ಮತ್ತೊಮ್ಮೆ ಮಾಹಿತಿ ಸಂಗ್ರಹದ ಹೆಸರಿನಲ್ಲಿ ಅಧಿಕಾರಿಗಳು ಕಾಲಹರಣ ಮಾಡಿ ನೇರಪಾವತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆಂದು ದೂರಿದರು.

ಇದಕ್ಕು ಮೊದಲು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, 2017 ರಲ್ಲಿ ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸುವಾಗ ಸ್ವಚ್ಚತೆಯಲ್ಲಿ ತೊಡಗಿಕೊಂಡಿದ್ದ ಕಸದ ವಾಹನ ಚಾಲಕರು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರನ್ನು ನೇರಪಾವತಿ ಪ್ರಕ್ರಿಯೆಯಿಂದ ಕೈಬಿಟ್ಟಿತು. ಐಪಿಡಿ ಸಾಲಪ್ಪ ವರದಿ ಹಾಗೂ ಚಂದ್ರಶೇಖರ್ ವರದಿ ಸಹ ಸ್ವಚ್ಚತೆಯಲ್ಲಿ ತೊಡಗಿಕೊಂಡ ಎಲ್ಲರನ್ನು ಪೌರಕಾರ್ಮಿಕರೆಂದೆ ಗುರುತಿಸಿದೆ.ಆದರೆ ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರು ವಿಭಾಗದಲ್ಲಿ ತೊಡಗಿಕೊಂಡ ಸಾವಿರಾರು ಹೊರಗುತ್ತಿಗೆ ನೌಕರರು ಗುತ್ತಿಗೆ ಏಜೆನ್ಸಿಗಳ ಶೋಷಣೆಗೆ ಸಿಲುಕಿದ್ದಾರೆ. ಬಹಳಷ್ಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ ವೇತನ ಭವಿಷ್ಯ ನಿಧಿ ಜಾರಿಯಾಗಿಲ್ಲ.ನೌಕರರ ವೇತನ ಏಜೆನ್ಸಿಗಳ ಪಾಲಾಗುತ್ತಿದೆ. ನೇರಪಾವತಿ ಜಾರಿ ಮಾಡುವುದರಿಂದ ಶೇ.18 ರಷ್ಡು ಜಿಎಸ್ ಟಿ ಹಾಗೂ ಏಜೆನ್ಸಿಗಳಿಗೆ ನೀಡುವ ಸೇವಾಶುಲ್ಕ ಸೇರಿ ವಾರ್ಷಿಕ ಎರಡು ನೂರು ಕೋಟಿ ಸರಕಾರಕ್ಕೆ ಉಳಿತಾಯವಾಗಲಿದೆ.ಇದರಿಂದ ಹೊರಗುತ್ತಿಗೆ ನೌಕರರ ದಕ್ಷತೆಯು ಹೆಚ್ಚಲಿದೆ.ಕಾಲಮಿತಿಯೊಳಗೆ ಸ್ವಚ್ಚತಾ ಕಾರ್ಮಿಕರು ಹಾಗೂ ನೀರು ಸರಬರಾಜು ಸಹಾಯಕರನ್ನು ನೇರಪಾವತಿಗೆ ತರಲು ಅಗತ್ಯ ಕ್ರಮವಹಿಸಬೇಕು.ಇದು ಕಾಂಗ್ರೆಸ್ ಪಕ್ಷದ ಘೋಷಿತ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಸಭೆಗೆ ಮನವರಿಕೆ ಮಾಡಿದರು.ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹೊರಗುತ್ತಿಗೆ ನೌಕರರು ಗುತ್ತಿಗೆ ಪದ್ದತಿಯಿಂದ ತಮಗೆ ಆಗುತ್ತಿರುವ ಕಿರುಕುಳವನ್ನು ಸಚಿವರೆದುರು ಮಂಡಿಸಿದರು.
ಸಭೆಯಲ್ಲಿ ಪೌರಾಡಳಿತ ಇಲಾಖೆ ನಿರ್ದೇಶಕಿ ಎನ್. ಮಂಜುಶ್ರೀ, ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಕಲ್ಬುರ್ಗಿ ವಿಭಾಗ ಸಂಚಾಲಕ ಸಿದ್ದರಾಮ ಪಾಟೀಲ್, ಬೆಂಗಳೂರು ವಿಭಾಗ ಸಂಚಾಲಕ ಪುಟ್ಟಸ್ವಾಮಿ, ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೇಕಾಡು, ಬೆಳಗಾವಿ ವಿಭಾಗ ಸಂಚಾಲಹೊಸಮನಿ, ರಾಜು ಹೊಸಮನಿ, ಕರುನಾಡ ಸೇವಕರು ಸಂಘದ ಎಂ.ಎನ್ ಚಂದ್ರು, ಶಿವರಾಜ್, ದುಗ್ಗೇಶ್, ಗವೀಂದ್ರ, ಮಂಜುನಾಥ್, ನವೀನ್, ಸೋಮಣ್ಣ, ಮಣಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.