

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೆಲಸ ಅವಧಿಯನ್ನು ಹೆಚ್ಚಿಸುವ ಮೂಲಕ ಕಾರ್ಮಿಕರು ಹೋರಾಟದಿಂದ ಪಡೆದಿದ್ದ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಹರಿಹರ ಕ್ಷೇತ್ರದ ಶಾಸಕರಾದ ಎಸ್.ರಾಮಪ್ಪ ಟೀಕಿಸಿದರು
ಹರಿಹರದ ಚರ್ಚೆ ರಸ್ತೆಯಲ್ಲಿರುವ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಅಸೋಸಿಯೇಷನ್(ಸಿಐಟಿಯು) ಕಚೇರಿ ಆವರಣದಲ್ಲಿ ಸಿಐಟಿಯು ದಾವಣಗೆರೆ ಜಿಲ್ಲಾ ಸಮಿತಿ ಆಯೋಜಿಸಿದ್ದ ಕಾರ್ಮಿಕ ನಾಯಕ ಭಾನುವಳ್ಳಿ ಬಸವರಾಜ್ ಅವರಿಗೆ “ನುಡಿನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ಸ್ವತಃ ಹರಿಹರ ಗ್ರಾಸಿಂ ಕಂಪನಿ ಕಾರ್ಮಿಕನಾಗಿದ್ದವನು ಕೆಮಿಕಲ್ ಕಾರ್ಖಾನೆಗಳಲ್ಲಿ ಎಂಟು ಗಂಟೆ ಕೆಲಸ ಮಾಡುವುದೇ ಅತ್ಯಂತ ಕಷ್ಟಕರ ಇಂತಹ ಸನ್ನಿವೇಶದಲ್ಲಿ ಹತ್ತು ಹನ್ನೆರಡು ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿದರೆ ಅದು ಕಾರ್ಮಿಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದರೆ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಅನುಕೂಲ ಮಾಡುವ ಬದಲು ಮಾಲೀಕರ ಲಾಭ ಹೆಚ್ಚಿಸಲು ಸಹಾಯ ಮಾಡುತ್ತಿದೆ ರಾಜ್ಯದ ಬಿಜೆಪಿ ಸರ್ಕಾರವಂತೂ ಕರೋನಾ ಹೆಸರಿನಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು. ಭಾನುವಳ್ಳಿ ಬಸವರಾಜ್ ಸ್ವತಃ ಕಾರ್ಮಿಕನಾಗಿ ಬಳಿಕ ಕಾರ್ಮಿಕ ನಾಯಕನಾಗಿ ಬೆಳೆದು ಅವರ ಹಕ್ಕುಗಳಿಗಾಗಿ ಶ್ರಮಿಸಿದ್ದನ್ನು ಅವರು ಸ್ಮರಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್ ಮಾತನಾಡಿ ವಿಧಾನ ಸಭೆಯಲ್ಲಿ ಕಾರ್ಮಿಕ ಧ್ವನಿಯೇ ಇಲ್ಲವಾಗಿರುವ ಸನ್ನಿವೇಶದಲ್ಲಿ ಕಾರ್ಮಿಕ ನಾಯಕನಾಗಿದ್ದ ರಾಮಪ್ಪ ಸ್ವತಃ ಶಾಸಕನಾಗಿ ಆಯ್ಕೆಯಾಗಿದ್ದು ಸಂತೋಷದ ಸಂಗತಿ ಶ್ರಮಜೀವಿಗಳ ಚಳವಳಿಯೊಂದಿಗೆ ಬೆಳೆದು ಬಂದವರಿಗೆ ಕಾರ್ಮಿಕರ ಕಷ್ಟಗಳು ಅರ್ಥವಾಗುತ್ತವೆ. ರಾಮಪ್ಪ ನವರು ವಿಧಾನ ಸಭೆಯಲ್ಲಿ ಕಾರ್ಮಿಕರ ಧ್ವನಿಯಾಗಿ ಮತ್ತಷ್ಟು ಕೆಲಸ ಮಾಡಲಿ ಎಂದು ಆಶಿಸಿದರು. ಭಾನುವಳ್ಳಿ ಬಸವರಾಜ್ ಕೂಡ ಅತ್ಯುತ್ತಮ ಒಬ್ಬ ಜನನಾಯಕರಾಗಿದ್ದರು ಅವರ ಅಗಲುವಿಕೆ ಕಾರ್ಮಿಕ ಚಳವಳಿ ಉಂಟಾದ ನಷ್ಟ ಎಂದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಕೇಂದ್ರ ಸರ್ಕಾರ ಶ್ರಮಜೀವಿಗಳ ಭವಿಷ್ಯನಿಧಿ ಉಳಿತಾಯ ಮಾತ್ರವಲ್ಲ ಎಲ್ಲ ನಿಧಿಗಳನ್ನು ಕಬಳಿಸುತ್ತಿದೆ ಈಗಾಗಲೇ ಜನಸಾಮಾನ್ಯರು ನಿತ್ಯ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ ಈ ನೀತಿಗಳ ವಿರುದ್ದ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿ ಭಾನುವಳ್ಳಿ ಬಸವರಾಜ್ ನಿಧನ ಇಲ್ಲಿನ ಚಳವಳಿಗೆ ಸ್ವಲ್ಪ ನಷ್ಟವಾದರೂ ನಾವೆಲ್ಲರೂ ಸೇರಿ ಅವರ ಕನಸಿನ ಚಳವಳಿಯನ್ನು ಮುನ್ನಡೆಸಬೇಕು ಹರಿಹರದ ಅಭಿವೃದ್ದಿಯಲ್ಲಿ ಇಲ್ಲಿನ ಕಾರ್ಮಿಕ ಚಳವಳಿಗಳ ಪಾತ್ರ ದೊಡ್ಡದಿದೆ ಇಲ್ಲಿರುವ ಕಿರ್ಲೋಸ್ಕರ್ ಕಾರ್ಮಿಕರ ಸಂಘದ ಕಚೇರಿ ಜನಚಳವಳಿ ಕೇಂದ್ರವಾಗಿ ಬೆಳೆಸಲು ಶ್ರಮಿಸೋಣ ಎಂದರು.
ನುಡಿನಮನ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ್, ಎಐಟಿಯುಸಿ ಹಿರಿಯ ಮುಖಂಡರಾದ ಎಚ್.ಕೆ ಕೋಟ್ರಪ್ಪ, ಹರಿಹರ ಗ್ರಾಸಿಂ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಖಾಜಾ ಹುಸೇನ್, ಕೀರ್ಲೊಸ್ಕರ್ ಎಂಪ್ಲಾಯೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಯಾನಂದ ಪಾಲಿಪೈಬರ್ಸ್ ಕೆಲಸಗಾರರ ಸಂಘದ ಮುಖಂಡ ಕೋಟ್ರೇಶ್ ಓಲೆಕಾರ್,ಭಾನುವಳ್ಳಿ ಬಸವರಾಜ್ ಸಹೋದರರು ರಾಮ್ಕೋ ಸಿಮೆಂಟ್ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ,ಬೀಡಿ ಕಾರ್ಮಿಕ ಸಂಘದಮುಖಂಡ ಅಸ್ಪಖ್ಖುಲ್ಲಾ ಸೇರಿ ಇತರರು ಮಾತನಾಡಿದರು.
ಸಮಾರಂಭದಲ್ಲಿ ರೈತ ಮುಖಂಡರಾ ಈ ಶ್ರೀನಿವಾಸ,ಸಿಐಟಿಯು ಮುಖಂಡರಾದ,ನಾಗನಗೌಡ ಡಿ.ಎಂ.ಮಲಿಯಪ್ಪ, ಶ್ರೀನಿವಾಸಮೂರ್ತಿ,ಕಟ್ಟಡ ಕಾರ್ಮಿಕ ಸಂಘದ ಗುಡ್ಡಪ್ಪ, ದಲಿತ ಹಕ್ಕುಗಳ ಸಮಿತಿ ಮುಖಂಡ ಭರಮಪ್ಪ, ಕಾರ್ಮಿಕ ಮುಖಂಡರಾದ ಕರೇಲಿಂಗಪ್ಪ, ಆರೋಗ್ಯ ಇಲಾಖೆಯ ನೌಕರರ ಸಂಘದ ಬಸವರಾಜ್ ಯರೆಸೀಮೆ ಪ್ರಕಾಶ ಸೂರ್ಯವಂಶಿ ನಾಗರಾಜ್ ರಾವ್ ವಿವಿಧ ಕಾರ್ಮಿಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು ಸಿಐಟಿಯು ಮುಖಂಡ ಮುದಿಮಲ್ಲನಗೌಡರು ಕಾರ್ಯಕ್ರಮ ನಿರ್ವಹಣೆ ಮಾಡಿದರು.