

ದಾವಣಗೆರೆ: ಗಣಪನ ಹಬ್ಬ ಬಂದಿದ್ದು, ಈಗ ಎಲ್ಲೆಲ್ಲೂ ಗಣೇಶನ ಮೂರ್ತಿಗಳನ್ನಿಟ್ಟು ಪೂಜೆ ಮಾಡುವ ಸಡಗರ ಕಂಡು ಬಂದಿದೆ. ಮನೆಮನೆಗೆ, ಗಲ್ಲಿಗಲ್ಲಿಗಳಿಗೆ ತೆರಳಲು ಕುಂಬಾರರ ಕೇರಿಗಳಲ್ಲಿ ಮಣ್ಣಿನ ಸಾವಿರಾರು ವಿಧದ ಗಣೇಶ ಮೂರ್ತಿಗಳು ಸಿದ್ಧವಾಗಿವೆ. 4 ತಿಂಗಳ ಮುಂಚಿನಿಂದಲೇ ಕುಂಬಾರರ ಮನೆಗಳಲ್ಲಿ ಗಣೇಶ ಮೂರ್ತಿ ಮಾಡುವ ಕಾಯಕ ಶುರುವಾಗುತ್ತದೆ. ಯುಗಾದಿಯ ಸಂದರ್ಭದಲ್ಲಿ ಮಣ್ಣು ತರಲಾಗುತ್ತದೆ. ಈ ಬಾರಿ ಯುಗಾದಿ ಸಂದರ್ಭದಲ್ಲೇ ಕೆರೆ- ಕಟ್ಟೆಗಳು ತುಂಬಿದ್ದರಿಂದ ಗಣೇಶ ಮೂರ್ತಿ ಮಾಡುವವರಿಗೆ ಮಣ್ಣು ತರಿಸಲು ಸಮಸ್ಯೆ ಉಂಟಾಯಿತು. ನಿರಂತರ ಮಳೆಯ ನಡುವೆಯೂ ಕುಂಬಾರರು ಕಷ್ಟಪಟ್ಟು ಮಣ್ಣಿನ ಗಣೇಶ ಸಿದ್ಧಪಡಿಸಿದ್ದಾರೆ.
ಸಣ್ಣ ಗಣೇಶ ಮೂರ್ತಿಗಳನ್ನು ಹತ್ತಿ ಹಾಕಿ ಮಾಡುತ್ತೇವೆ. ದೊಡ್ಡ ಮೂರ್ತಿಗಳಿಗೆ ತೆಂಗಿನ ನಾರನ್ನು ಬಳಸಿದ್ದೇವೆ. ಕೆಲವರು ಪೂರ್ಣ ಮಣ್ಣಿನಲ್ಲೇ ಮಾಡಿದ ಟೊಳ್ಳಿಲ್ಲದ ಗಟ್ಟಿ ಗಣಪ ಹೇಳಿ ಮಾಡಿಸಿಕೊಂಡಿದ್ದಾರೆ. ಟೆರ್ರಾಕೋಟಾ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ನಗರದ ದುರ್ಗಾಂಬಿಕಾ ದೇವಿ ದೇವಸ್ಥಾನ ರಸ್ತೆಯಲ್ಲಿರುವ ಗಣಪತಿ ಮೂರ್ತಿ ತಯಾರಕ ವಿಠಲರಾವ್ ಹೇಳುತ್ತಾರೆ.

ಈ ವರ್ಷ ನೂರು ಗಣಪತಿ ತಯಾರಿಸಿದ್ದೇನೆ.400 ರೂ ನಿಂದ ಹಿಡಿದು 2500 ರೂ ಬೆಲೆಯವರೆಗೂ ಗಣಪತಿ ಮೂರ್ತಿಗಳಿವೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಜನರು ಆಗಮಿಸಿ ಇಲ್ಲಿಂದ ಗಣೇಶ ಮೂರ್ತಿ ಕೊಂಡೊಯ್ಯತ್ತಾರೆ.ಕಳೆದ ಬಾರಿಗಿಂತ ಈ ಬಾರಿ ವ್ಯಾಪರ ಚನ್ನಾಗಿದೆ.ನಾವು ಕೇವಲ ಮಣ್ಣಿನಿಂದ ಮಾತ್ರ ಮೂರ್ತಿ ತಯಾರಿಸುತ್ತೇವೆ.ಪಿಒಪಿಯಿಂದ ಮೂರ್ತಿ ಮಾಡುವುದಿಲ್ಲ.ತಯಾರಿಕಾ ವೆಚ್ಚ ಕಳೆದು ಒಂದು ಮೂರ್ತಿ ಮಾರಾಟದಿಂದ 200 ರಿಂದ 250 ರೂ ಉಳಿಯುತ್ತದೆ ಎನ್ನುತ್ತಾರೆ ವಿಠಲರಾವ್. ದಾವಣಗೆರೆ ನಗರದಲ್ಲಿ ಭಾರತ್ ಕಾಲೊನಿ, ಕಾಯಿಪೇಟೆ ಹಾಗೂ ಆನೆಕೊಂಡಗಳಲ್ಲಿ ಕೆಲವು ಕುಂಬಾರ ಕುಟುಂಬಗಳು ಮಾತ್ರ ಈಗ ಗಣೇಶ ಮೂರ್ತಿಗಳನ್ನು ಮಾಡುತ್ತಿವೆ. ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಳದಿಂದಾಗಿ ಹಲವರು ಮಾಡುವುದನ್ನು ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಬೇರೆ ಊರುಗಳಿಂದ ತರಿಸಿ ಮಾರಾಟ ಮಾಡುತ್ತಾರೆ. ಪರಮೇಶ್ವರನೊಂದಿಗಿರುವ ಗಜಮುಖ, ಮಹಾರಾಜ ಗಣೇಶ, ಎಲೆಯಲ್ಲಿರುವ ಗಣಪತಿ, ಬಾಲ ಗಣಪತಿ, ಕೃಷ್ಣ ಗಣಪತಿ, ಸಿಂಹವಾಹನ, ನಂದಿ ವಾಹನ ಗಣೇಶ ಮೂರ್ತಿಗಳೂ ನಗರದ ಹಲವೆಡೆ ಸಿದ್ಧವಾಗಿವೆ. ಒಟ್ಟಾರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಮೂರ್ತಿ ತಯಾರಕರು ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ. ಏಕೆಂದರೆ ಮಣ್ಣಿನ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಬಂದಿದೆ.